KN/Prabhupada 0239 - ಕೃಷ್ಣನನ್ನು ತಿಳಿಯಲು ವಿಶೇಷ ಇಂದ್ರಿಯಗಳ ಅಗತ್ಯವಿದೆ



Lecture on BG 2.3 -- London, August 4, 1973

ಈ ಸಹಾನುಭೂತಿಯು ಅರ್ಜುನನ ಅಕಾಲಿಕ ಕರುಣೆಯಂತೆಯೇ ಸರಿ. ಇಂದಿನ ಸರ್ಕಾರವು ಕೊಲೆಗಾರನನ್ನು ಶಿಕ್ಷಿಸದೆ ಅವನ ಮೇಲೆ ತೋರುತ್ತಿರುವ ಸಹಾನುಭೂತಿಯೂ ಅರ್ಜುನನ ಮನಸ್ಥಿತಿಯನ್ನೇ ಹೋಲುತ್ತದೆ. ಕೊಲೆಗಾರನನ್ನು ಶಿಕ್ಷಿಸದೆ ಬಿಡುವುದು ದಯೆಯಲ್ಲ, ಅದು ಕೇವಲ ಹೃದಯ-ದೌರ್ಬಲ್ಯಮ್. ಇದು ಕರ್ತವ್ಯವಲ್ಲ. ಮೇಲಧಿಕಾರಿಯ ಆದೇಶವನ್ನು ಯಾವುದೇ ಮುಲಾಜಿಲ್ಲದೆ ಕಟ್ಟುನಿಟ್ಟಾಗಿ ಪಾಲಿಸುವುದೇ ನಿಜವಾದ ಕರ್ತವ್ಯ. ಆದುದರಿಂದ, ಇಂತಹ ಸಹಾನುಭೂತಿಯು ಕೇವಲ ಕ್ಷುಲ್ಲಕ ಹೃದಯ ದೌರ್ಬಲ್ಯವಷ್ಟೇ. ಸಾಮಾನ್ಯ ಮನುಷ್ಯನಿಗೆ ಇಂತಹ ವಿಷಯಗಳು ಅರ್ಥವಾಗುವುದಿಲ್ಲ. ಆದುದರಿಂದ, ಕೃಷ್ಣನನ್ನು ತಿಳಿಯಲು ಸಾಮಾನ್ಯ ಇಂದ್ರಿಯಗಳಲ್ಲದೆ ವಿಶೇಷ ಇಂದ್ರಿಯಗಳ ಅಗತ್ಯವಿದೆ. ಅಂದರೆ ಕಣ್ಣುಗಳನ್ನು ಕಿತ್ತು ಬೇರೆ ಕಣ್ಣು ಹಾಕಿಸಿಕೊಳ್ಳುವುದಲ್ಲ, ಬದಲಾಗಿ ಅದನ್ನು ಶುದ್ಧೀಕರಿಸಿಕೊಳ್ಳುವುದು. ತತ್-ಪರತ್ವೇನ ನಿರ್ಮಲಮ್ (ಚೈ.ಚ ಮಧ್ಯ 19.170). ಹೇಗೆಂದರೆ, ನಿಮ್ಮ ಕಣ್ಣುಗಳಲ್ಲಿ ಏನಾದರೂ ಕಾಯಿಲೆ ಇದ್ದರೆ, ನೀವು ಔಷಧಿಯನ್ನು ಹಚ್ಚುತ್ತೀರಿ ಮತ್ತು ಅದು ಗುಣವಾದಾಗ ನೀವು ಎಲ್ಲವನ್ನೂ ಸ್ಪಷ್ಟವಾಗಿ ನೋಡಬಹುದು. ಹಾಗೆಯೇ ಮಂದವಾಗಿರುವ ನಮ್ಮ ಇಂದ್ರಿಯಗಳನ್ನು ಶುದ್ಧಗೊಳಿಸಿದಾಗ ಕೃಷ್ಣನು ಯಾರೆಂದು ತಿಳಿಯುತ್ತದೆ. ಸೇವೋನ್ಮುಖೇ ಹಿ ಜಿಹ್ವಾದೌ ಸ್ವಯಮ್ ಏವ ಸ್ಫುರತಿ ಅದಃ (ಬ್ರಹ್ಮ. ಸಂಹಿತ 1.2.234). ಕೃಷ್ಣನ ನಾಮ, ರೂಪ, ಗುಣಗಳನ್ನು ಈ ಮಂದ ಇಂದ್ರಿಯಗಳಿಂದ ಗ್ರಹಿಸಲು ಸಾಧ್ಯವಿಲ್ಲ. ಹಾಗಾದರೆ ಮಾರ್ಗವೇನು? ಸೇವೋನ್ಮುಖೇ ಹಿ ಜಿಹ್ವಾದೌ. ಮತ್ತೆ 'ಜಿಹ್ವಾದೌ' - ಅಂದರೆ ನಾಲಿಗೆಯಿಂದ ಆರಂಭವಾಗುತ್ತದೆ ನಾಲಿಗೆಯನ್ನು ನಿಯಂತ್ರಿಸುವುದರಿಂದ. ನೋಡಿ, ಕೃಷ್ಣನನ್ನು ಅರ್ಥಮಾಡಿಕೊಳ್ಳಲು ನಾಲಿಗೆಯನ್ನು ಹತೋಟಿಯಲ್ಲಿಡಬೇಕು ಎನ್ನುವುದು ಎಂತಹ ವಿಚಿತ್ರ ಸಂಗತಿ! ಇದು ನಿಜಕ್ಕೂ ಅದ್ಭುತವೇ ಸರಿ. ಅದು ಹೇಗೆ ಸಾಧ್ಯ? ಕೃಷ್ಣನನ್ನು ತಿಳಿಯಲು ನಾನು ನನ್ನ ನಾಲಿಗೆಯನ್ನು ನಿಯಂತ್ರಿಸಬೇಕೇ? ಆದರೆ ಶಾಸ್ತ್ರದ ಆಜ್ಞೆ ಇದೇ ಆಗಿದೆ: ಸೇವೋನ್ಮುಖೇ ಹಿ ಜಿಹ್ವಾದೌ. ಜಿಹ್ವಾ ಎಂದರೆ ನಾಲಿಗೆ. ಕೃಷ್ಣನನ್ನು ಕಾಣಲು, ಅವನನ್ನು ತಿಳಿಯಲು ಮೊದಲ ಕೆಲಸವೆಂದರೆ ನಾಲಿಗೆಯನ್ನು ಗೆಲ್ಲುವುದು. ಆದುದರಿಂದಲೇ ನಾವು ಮಾಂಸಹಾರ ಮತ್ತು ಮದ್ಯಪಾನ ಮಾಡಬೇಡಿ ಎನ್ನುತ್ತೇವೆ. ಏಕೆಂದರೆ ಇದು ನಾಲಿಗೆಯ ಮೇಲಿನ ನಿಯಂತ್ರಣ. ವಿಕೃತಗೊಂಡ ಇಂದ್ರಿಯಗಳ ಪೈಕಿ, ನಾಲಿಗೆಯೇ ಅತ್ಯಂತ ಬಲಶಾಲಿ ಶತ್ರುವಾಗಿದೆ. ಆದರೆ ಮೂರ್ಖರು ಹೇಳುತ್ತಾರೆ, "ನಿಮಗೆ ಇಷ್ಟ ಬಂದದ್ದನ್ನು ತಿನ್ನಿ, ಅದಕ್ಕೂ ಧರ್ಮಕ್ಕೂ ಸಂಬಂಧವಿಲ್ಲ" ಎಂದು. ಆದರೆ ವೈದಿಕ ಶಾಸ್ತ್ರ ಹೇಳುತ್ತದೆ, "ಮೂಢನೇ, ಮೊದಲು ನಿನ್ನ ನಾಲಿಗೆಯನ್ನು ಹತೋಟಿಗೆ ತಂದುಕೋ, ಆಗ ನಿನಗೆ ದೇವರು ಯಾರೆಂದು ತಿಳಿಯುತ್ತದೆ."

ಇದೇ ವೈದಿಕ ಆಜ್ಞೆಗಳ ಪರಿಪೂರ್ಣತೆ. ನಿಮ್ಮ ನಾಲಿಗೆಯನ್ನು ಗೆದ್ದರೆ, ನಿಮ್ಮ ಹೊಟ್ಟೆ ಮತ್ತು ಜನನೇಂದ್ರಿಯಗಳನ್ನು ಸುಲಭವಾಗಿ ನಿಯಂತ್ರಿಸಬಹುದು. ರೂಪ ಗೋಸ್ವಾಮಿಗಳು ಈ ಬಗ್ಗೆ ಉಪದೇಶ ನೀಡಿದ್ದಾರೆ:

ವಾಚೋ-ವೇಗಂ ಮನಸೋ ಕ್ರೋಧ-ವೇಗಂ
ಜಿಹ್ವಾವೇಗಮ್ ಉದರೋಪಸ್ಥ-ವೇಗಮ್
ಏತಾನ್ ವೇಗಾನ್ ಯೋ ವಿಷಹೇತ ಧೀರಃ
ಸರ್ವಾಮ್ ಅಪೀಮಾಂ ಸ ಪೃಥಿವೀಂ ಸ ಶಿಷ್ಯತ್
(ಉಪದೇಶಾಮೃತ 1)

ಯಾರು ನಾಲಿಗೆಯನ್ನು ನಿಯಂತ್ರಿಸಲು, ಮನಸ್ಸನ್ನು ನಿಯಂತ್ರಿಸಲು, ಕ್ರೋಧವನ್ನು ನಿಯಂತ್ರಿಸಲು, ಹೊಟ್ಟೆಯನ್ನು ನಿಯಂತ್ರಿಸಲು ಮತ್ತು ಜನನೇಂದ್ರಿಯವನ್ನು ನಿಯಂತ್ರಿಸಲು ಸಮರ್ಥರಾಗಿದ್ದಾರೋ... ಈ ಆರು ಬಗೆಯ ನಿಯಂತ್ರಣಗಳು ಯಾರಲ್ಲಿವೆಯೋ, ಅವರು ಆಧ್ಯಾತ್ಮಿಕ ಗುರುಗಳಾಗಲು ಯೋಗ್ಯರು; ಅವರು ಇಡೀ ಜಗತ್ತಿನಾದ್ಯಂತ ಶಿಷ್ಯರನ್ನು ಸ್ವೀಕರಿಸಬಹುದು ಎಂಬುದು ಈ ಉಪದೇಶದ ತಾತ್ಪರ್ಯ. ಆದರೆ ನಿಮಗೆ ನಿಮ್ಮ ನಾಲಿಗೆಯನ್ನು ಹತೋಟಿಯಲ್ಲಿಡಲು ಸಾಧ್ಯವಾಗದಿದ್ದರೆ, ನಿಮ್ಮ ಸಿಟ್ಟನ್ನು ಹತೋಟಿಯಲ್ಲಿಡಲು ಸಾಧ್ಯವಾಗದಿದ್ದರೆ, ನಿಮ್ಮ ಊಹಾಪೋಹಗಳನ್ನು ನಿಯಂತ್ರಿಸಲು ಸಾಧ್ಯವಾಗದಿದ್ದರೆ, ನೀವು ಆಧ್ಯಾತ್ಮಿಕ ಗುರುಗಳಾಗಲು ಹೇಗೆ ತಾನೇ ಸಾಧ್ಯ? ಅದು ಸಾಧ್ಯವೇ ಇಲ್ಲ. ಪೃಥಿವೀಂ ಸ ಶಿಷ್ಯತ್. ಯಾರು ಇವುಗಳನ್ನು ಸಾಧಿಸಿದರೋ ಅವರನ್ನು 'ಗೋಸ್ವಾಮಿ' ಅಥವಾ 'ಸ್ವಾಮಿ' ಎನ್ನಲಾಗುತ್ತದೆ, ಇಂದ್ರಿಯಗಳ ಒಡೆಯ. ಈ ಆರು ಬಗೆಯ ವೇಗಗಳನ್ನು ನಿಯಂತ್ರಿಸುವಲ್ಲಿ ನಿಸ್ಸೀಮರಾದವರು.

ಆದುದರಿಂದ ಆರಂಭವು ನಾಲಿಗೆಯಿಂದಲೇ ಆಗುತ್ತದೆ. ಸೇವೋನ್ಮುಖೇ ಹಿ ಜಿಹ್ವಾದೌ ಸ್ವಯಮ್ ಏವ ಸ್ಫುರತ್ಯದಃ (ಬ್ರಹ್ಮ. ಸಂಹಿತ 1.2.234). ಸೇವೆ. ನಾಲಿಗೆಯನ್ನು ಭಗವಂತನ ಸೇವೆಯಲ್ಲಿ ಹೇಗೆ ತೊಡಗಿಸಬಹುದು? ಹರೇ ಕೃಷ್ಣ ಮಹಾಮಂತ್ರವನ್ನು ಜಪಿಸುವುದರ ಮೂಲಕ ಮತ್ತು ಸದಾ ಅವನ ಗುಣಗಾನ ಮಾಡುವುದರ ಮೂಲಕ. ವಾಚಾಂಸಿ ವೈಕುಂಠ-ಗುಣಾನುವರ್ಣನೇ (ಶ್ರೀ.ಭಾ 9.4.18-20). ವಾಚಾಂಸಿ ಎಂದರೆ ಮಾತನಾಡುವುದು. ಮಾತನಾಡುವುದು ಮತ್ತು ರುಚಿ ನೋಡುವುದು ನಾಲಿಗೆಯ ಕೆಲಸ. ಹೀಗೆ ಭಗವಂತನ ಗುಣಗಾನ ಮಾಡುವುದರ ಮೂಲಕ ನೀವು ನಾಲಿಗೆಯನ್ನು ಅವನ ಸೇವೆಯಲ್ಲಿ ತೊಡಗಿಸುತ್ತೀರಿ. "ನಾನು ಇನ್ನು ಮುಂದೆ ಕೃಷ್ಣನ ಮಹಿಮೆಯನ್ನು ಬಿಟ್ಟು ಬೇರೇನನ್ನೂ ಮಾತನಾಡುವುದಿಲ್ಲ", ಎಂದು ಸಂಕಲ್ಪ ಮಾಡುವುದೇ ನಾಲಿಗೆಯ ನಿಯಂತ್ರಣ. ಹರಟೆ ಅಥವಾ ಗ್ರಾಮ್ಯ-ಕಥಾ ಆಡುವುದನ್ನು ನಿಲ್ಲಿಸಬೇಕು. ನಾವು ಕೆಲವೊಮ್ಮೆ ಒಟ್ಟಿಗೆ ಕುಳಿತುಕೊಳ್ಳುತ್ತೇವೆ. ಎಷ್ಟೋ ಅನಗತ್ಯ ಹರಟೆಗಳನ್ನು ಆಡುತ್ತೇವೆ. ಅದನ್ನು ನಿಯಂತ್ರಿಸಬೇಕು. “ಈಗ ನಾನು ನನ್ನ ನಾಲಿಗೆಯನ್ನು ಭಗವಂತನ ಸೇವೆಯಲ್ಲಿ ತೊಡಗಿಸಿರುವುದರಿಂದ, ನಾವು ಇಂದ್ರಿಯ ತೃಪ್ತಿಯ ಯಾವುದೇ ಮಾತುಗಳನ್ನು ಆಡಬಾರದು.́́” ಇದೇ ನಾಲಿಗೆಯನ್ನು ಹತೋಟಿಯಲ್ಲಿಡುವುದು.ಕೃಷ್ಣನಿಗೆ ಅರ್ಪಿಸದ ಯಾವುದನ್ನೂ ತಿನ್ನುವುದಿಲ್ಲ ಎಂದು ನಿರ್ಧರಿಸಬೇಕು. ಇವು ಸಣ್ಣ ತಂತ್ರಗಳಂತೆ ಕಂಡರೂ ಅತ್ಯಂತ ಮೌಲ್ಯಯುತವಾದುವು. ಇಂತಹ ತಪಸ್ಸಿನಿಂದ ಕೃಷ್ಣನು ಪ್ರಸನ್ನನಾಗಿ ತನ್ನನ್ನು ತಾನು ಪ್ರಕಟಿಸಿಕೊಳ್ಳುತ್ತಾನೆ. ಕೃಷ್ಣನನ್ನು ಅರ್ಥಮಾಡಿಕೊಳ್ಳಲು, ಕಾಣಲು ನಿಮಗೆ ಸಾಧ್ಯವಿಲ್ಲ. "ಕೃಷ್ಣಾ, ಇಲ್ಲಿ ಬಾ, ಕೊಳಲು ನುಡಿಸುತ್ತಾ ನರ್ತಿಸು, ನಾನು ನಿನ್ನನ್ನು ನೋಡಬೇಕು", ಎಂದು ನೀವು ಅವನಿಗೆ ಆಜ್ಞೆ ಮಾಡಲು ಸಾಧ್ಯವಿಲ್ಲ. ಇದು ಆಜ್ಞೆ. ಕೃಷ್ಣ ನಿಮ್ಮ ಆಜ್ಞೆಗೆ ಬದ್ಧನಲ್ಲ. ಆದುದರಿಂದಲೇ ಚೈತನ್ಯ ಮಹಾಪ್ರಭುಗಳು ಕಲಿಸಿದ್ದಾರೆ: ಅಶ್ಲಿಷ್ಯ ವಾ ಪಾದ-ರತಾಂ ಪಿನಸ್ತು ಮಾಂ ಮರ್ಮ-ಹತಾಂ ಕರೋತು ವಾ ಅದರ್ಶನಮ್ (ಚೈ.ಚ. ಅಂತ್ಯ 20.47).