KN/Prabhupada 0238 - ಭಗವಂತನು ಮಂಗಳಮಯನು, ಅವನು ಸಕಲ ಮಂಗಳಮಯನು.
Lecture on BG 2.3 -- London, August 4, 1973
ಅತಃ ಶ್ರೀ-ಕೃಷ್ಣ-ನಾಮಾದಿ ನ ಭವೇದ್ ಗ್ರಾಹ್ಯಮಿಂದ್ರಿಯೈಃ (ಚೈ.ಚ ಮಧ್ಯ 17.136). ಕೃಷ್ಣನ ಈ ನಡವಳಿಕೆಯನ್ನು ಸಾಮಾನ್ಯ ಮನುಷ್ಯರು ಹೇಗೆ ತಾನೇ ಅರ್ಥಮಾಡಿಕೊಳ್ಳಲು ಸಾಧ್ಯ? ಅವರ ಇಂದ್ರಿಯಗಳು ಅಪೂರ್ಣವಾದುದರಿಂದ ಅವರು ಕೃಷ್ಣನನ್ನು ತಪ್ಪಾಗಿ ಅರ್ಥೈಸುತ್ತಾರೆ. ಕೃಷ್ಣ ಮಾತ್ರವಲ್ಲ, ಅವನ ಭಕ್ತನಾದ ವೈಷ್ಣವನ ವಿಷಯದಲ್ಲೂ ಅಷ್ಟೇ. ವೈಷ್ಣವೇರ ಕ್ರಿಯಾ ಮುದ್ರಾ ವಿಜ್ಞೇಹ ನಾ ಬುಝಯ (ಚೈ.ಚ ಮಧ್ಯ 17.136). ಒಬ್ಬ ವೈಷ್ಣವ ಆಚಾರ್ಯರು ಏನು ಮಾಡುತ್ತಿದ್ದಾರೆ ಮತ್ತು ಏಕೆ ಮಾಡುತ್ತಿದ್ದಾರೆ ಎಂಬುದು ಅತ್ಯಂತ ಬುದ್ಧಿವಂತ ಮನುಷ್ಯನಿಗೂ ತಿಳಿಯುವುದಿಲ್ಲ. ಆದುದರಿಂದ ನಾವು ಮಹಾತ್ಮರನ್ನು ಅನುಕರಿಸಲು ಪ್ರಯತ್ನಿಸಬಾರದು; ಬದಲಾಗಿ ಅವರ ಆದೇಶ ಮತ್ತು ಶಾಸ್ತ್ರದ ಆಜ್ಞೆಗಳನ್ನು ಪಾಲಿಸಬೇಕು. ಕೃಷ್ಣನು ಅರ್ಜುನನನ್ನು ಯುದ್ಧಕ್ಕೆ ಪ್ರೇರೇಪಿಸುತ್ತಿದ್ದಾನೆ. ಅದನ್ನೇ ನೋಡಿ ನಾವು ಕೂಡ ಯಾರನ್ನಾದರೂ ಎತ್ತಿಕಟ್ಟಬಾರದು; ಅದು ಅನೈತಿಕವಾಗುತ್ತದೆ. ಆದರೆ ಕೃಷ್ಣನಿಗೆ ಅದು ಅನೈತಿಕವಲ್ಲ. ಅವನು ಮಾಡುವುದೆಲ್ಲವೂ... ಭಗವಂತನು ಮಂಗಳಮಯನು, ಅವನು ಸಕಲ ಮಂಗಳಮಯನು. ಅವನು ಏನು ಮಾಡಿದರೂ ಅದು ಮಂಗಳವೇ ಎಂದು ನಾವು ಸ್ವೀಕರಿಸಬೇಕು. ಇದು ಒಂದು ಮುಖ. ಇನ್ನು ನಾನು ಅಧಿಕಾರಿಯ ಆದೇಶವಿಲ್ಲದೆ ಮಾಡುವುದೆಲ್ಲವೂ ಕೆಟ್ಟದ್ದೇ. ಕೃಷ್ಣನಿಗೆ ಯಾರ ಆದೇಶದ ಅಗತ್ಯವೂ ಇಲ್ಲ. ಈಶ್ವರಃ ಪರಮಃ ಕೃಷ್ಣಃ (ಬ್ರ.ಸಂ ೫.೧). ಅವನು ಪರಮ ನಿಯಂತ್ರಕ. ಅವನಿಗೆ ಯಾರ ಉಪದೇಶವೂ ಬೇಕಿಲ್ಲ. ಅವನು ಮಾಡುವುದೆಲ್ಲವೂ ಪರಿಪೂರ್ಣ. ಇದೇ ಕೃಷ್ಣನ ಬಗ್ಗೆ ತಿಳಿವಳಿಕೆ. ಕೃಷ್ಣನನ್ನು ನನ್ನದೇ ರೀತಿಯಲ್ಲಿ ಅಧ್ಯಯನ ಮಾಡುತ್ತೇನೆ ಎನ್ನುವುದು ಸರಿಯಲ್ಲ. ಕೃಷ್ಣನು ನಿಮ್ಮ ಪರೀಕ್ಷೆಗೆ ಅಥವಾ ತಪಾಸಣೆಗೆ ಒಳಪಟ್ಟವನಲ್ಲ. ಅವನು ಎಲ್ಲದಕ್ಕಿಂತ ಮಿಗಿಲಾದವನು, ದಿವ್ಯನಾದವನು. ಆದುದರಿಂದ ದಿವ್ಯ ದೃಷ್ಟಿಯಿಲ್ಲದವರು ಕೃಷ್ಣನನ್ನು ತಪ್ಪಾಗಿ ಅರ್ಥೈಸುತ್ತಾರೆ. ಇಲ್ಲಿ ಅವನು ನೇರವಾಗಿ ಪ್ರಚೋದಿಸುತ್ತಿದ್ದಾನೆ:
- ಕ್ಲೈಬ್ಯಂ ಮಾ ಸ್ಮ ಗಮಃ ಪಾರ್ಥ
- ನೈತತ್ ತ್ವಯ್ಯುಪಪದ್ಯತೇ
- ಕ್ಷುದ್ರಂ ಹೃದಯ-ದೌರ್ಬಲ್ಯಂ
- ತ್ಯಕ್ತ್ವೋತ್ತಿಷ್ಠ ಪರಂತಪ
- (ಭ.ಗೀ 2.3)
ಇಲ್ಲಿ 'ಪರಂತಪ' ಎಂಬ ಪದವನ್ನು ಬಳಸಲಾಗಿದೆ. "ನೀನು ಒಬ್ಬ ಕ್ಷತ್ರಿಯ, ರಾಜ. ದುರುಳರನ್ನು ಶಿಕ್ಷಿಸುವುದೇ ನಿನ್ನ ಕೆಲಸ. ಅದೇ ನಿನ್ನ ವ್ಯವಹಾರ. ನೀನು ಅವರನ್ನು ಕ್ಷಮಿಸುವಂತಿಲ್ಲ." ಹಿಂದೆ ರಾಜರು ಹೀಗೆಯೇ ಇದ್ದರು; ರಾಜನೇ ತೀರ್ಪು ನೀಡುತ್ತಿದ್ದನು. ಅಪರಾಧಿಯನ್ನು ರಾಜನ ಮುಂದೆ ತಂದಾಗ, ರಾಜನಿಗೆ ಯುಕ್ತವೆಂದು ತೋರಿದರೆ ಸ್ವತಃ ತನ್ನ ಖಡ್ಗದಿಂದ ಅವನ ಶಿರಚ್ಛೇದ ಮಾಡುತ್ತಿದ್ದನು. ಅದು ರಾಜನ ಕರ್ತವ್ಯವಾಗಿತ್ತು. ಸುಮಾರು ನೂರು ವರ್ಷಗಳ ಹಿಂದೆ ಕಾಶ್ಮೀರದಲ್ಲಿ ಒಬ್ಬ ಕಳ್ಳ ಸಿಕ್ಕಿಬಿದ್ದಾಗ ಅವನನ್ನು ರಾಜನ ಮುಂದೆ ತರಲಾಗುತ್ತಿತ್ತು. ಕಳ್ಳತನ ಸಾಬೀತಾದರೆ, ರಾಜನು ಸ್ವತಃ ಅವನ ಕೈಗಳನ್ನು ಕಡಿಯುತ್ತಿದ್ದನು. ನೂರು ವರ್ಷಗಳ ಹಿಂದೆಯೂ ಇದು ಜಾರಿಯಲ್ಲಿತ್ತು. ಇದನ್ನು ನೋಡಿ ಇತರ ಕಳ್ಳರಿಗೆ ಎಚ್ಚರಿಕೆ ಸಿಗುತ್ತಿತ್ತು - "ನಮಗೂ ಇದೇ ಶಿಕ್ಷೆಯಾದೀತು" ಎಂದು. ಆದುದರಿಂದ ಕಾಶ್ಮೀರದಲ್ಲಿ ಕಳ್ಳತನ ಅಥವಾ ಮನೆಗಳ್ಳತನವೇ ಇರಲಿಲ್ಲ. ರಸ್ತೆಯಲ್ಲಿ ಯಾರಾದರೂ ಏನನ್ನಾದರೂ ಕಳೆದುಕೊಂಡರೆ ಅದು ಅಲ್ಲೇ ಬಿದ್ದಿರುತ್ತಿತ್ತು, ಯಾರೂ ಮುಟ್ಟುತ್ತಿರಲಿಲ್ಲ. ರಾಜನ ಆಜ್ಞೆ ಹೀಗಿತ್ತು - "ರಸ್ತೆಯಲ್ಲಿ ಯಾರೂ ಇಲ್ಲದ ವಸ್ತು ಬಿದ್ದಿದ್ದರೆ ಮುಟ್ಟಬೇಡಿ. ಅದನ್ನು ಕಳೆದುಕೊಂಡವನೇ ಬಂದು ಒಯ್ಯುತ್ತಾನೆ." ಆದುದರಿಂದ ಇಂತಹ ಮರಣದಂಡನೆಯ ಶಿಕ್ಷೆ ಅಗತ್ಯವಿದೆ. ಇಂದು ಮರಣದಂಡನೆಯನ್ನು ಮನ್ನಾ ಮಾಡಲಾಗುತ್ತದೆ. ಕೊಲೆಗಾರರನ್ನು ಗಲ್ಲಿಗೇರಿಸುತ್ತಿಲ್ಲ. ಇದೆಲ್ಲವೂ ತಪ್ಪು, ಇದೆಲ್ಲವೂ ಮೂರ್ಖತನ. ಕೊಲೆಗಾರನನ್ನು ಕೊಲ್ಲಲೇಬೇಕು, ದಯೆ ತೋರಿಸಬಾರದು. ಮನುಷ್ಯನನ್ನು ಕೊಂದವನಷ್ಟೇ ಅಲ್ಲ, ಪ್ರಾಣಿಯನ್ನು ಕೊಂದವನನ್ನೂ ತಕ್ಷಣವೇ ಗಲ್ಲಿಗೇರಿಸಬೇಕು. ಅಂತಹ ಕಟ್ಟುನಿಟ್ಟಾದ ಆಡಳಿತವನ್ನು ರಾಜನು ಹೊಂದಿರಬೇಕು.